![]() |
| ಕಾಂಚನೇಶ್ವರಿ ದೇವಿ ದೇವಸ್ಥಾನ ಸೂಳಿಕೇರಿ |
ವಿಶೇಷವಾಗಿ ದೇವಿಗೆ ವಾರ ಹಿಡಿದಾಗ ಐದು ಮಂಗಳವಾರ ಅಥವಾ ಶುಕ್ರವಾರ ಇಡೀ ಊರಿನ ಎಲ್ಲಾ ದೇವರುಗಳಿಗೆ ನೀರು ಮತ್ತು ಬೇಳೆ ಕಾಳುಗಳನ್ನು ಯುವಕರು ಹೋಗಿ ನೀಡಿ ಬರುತ್ತಾರೆ.
ಕೊನೆಯ ವಾರ ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಮಹಿಳೆಯರು ತಮ್ಮ ಮಕ್ಕಳು, ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಯಿ, ಕರ್ಪೂರ, ಜೋಳದ ಕಡಬು, ಹೂರಣದ ಕಡಬು ಸೇರಿದಂತೆ ವಿವಿಧ ನೈವೇದ್ಯ, ಬಾಳೆಹಣ್ಣು, ಉಡಿಯಕ್ಕಿ ಸಾಮಾನುಗಳೊಂದಿಗೆ ಗ್ರಾಮದೇವಿಯ ದೇವಸ್ಥಾನಕ್ಕೆ ಆಗಮಿಸಿ ಗ್ರಾಮದೇವಿ ದರ್ಶನ ಪಡೆದು ದೇವಿಗೆ ಉಡಿ ತುಂಬಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಸಂಜೆ ದೇವಿಯ ಪಲ್ಲಕ್ಕಿಯು ಊರನ್ನು ಪ್ರದಕ್ಷಿಣೆ ಹಾಕಿ ದೇವಸ್ಥಾನದ ಬಳಿ ಬಂದಾಗ ಕಾಂಚನೇಶ್ವರಿದೇವಿಯು ಭಕ್ತನೊಬ್ಬನ ಮೈ ಮೇಲೆ ಬಂದು ಓಡಲು ಪ್ರಾರಂಭಿಸುತ್ತಾಳೆ. ಹೊಲಗಳಲ್ಲಿ ಹಾದು ಹೋಗುತ್ತಾ, ಮುಳ್ಳು ಕಂಟಿಗಳನ್ನು ತುಳಿದಾಡುತ್ತಾ ಓಡುತ್ತಿರುವ ದೇವಿಯ ಹಿಂದೆ ಜನರು ಸಹ ಹೋಗುತ್ತಾರೆ. ದಾರಿಯುದ್ದಕ್ಕೂ ಭಕ್ತರು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪಕ್ಕದ ಕಾಗಲಗೊಂಬ ಗ್ರಾಮದ ಸಿಕ್ಕಲಮಟ್ಟೇಶ್ವರ ದೇವಾಲಯ ತಲುಪಿ, ದೇವಿಯು ಮರಳಿ ದೇವಸ್ಥಾನಕ್ಕೆ ಆಗಮಿಸಿದ ನಂತರ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮದೇವಿಗೆ ವಿಶೇಷ ಪೂಜೆ ನೆರವೇರಿಸಿ ಉಡಿ ತುಂಬಿ ನಾಡಿಗೆ ಉತ್ತಮ ಮಳೆ-ಬೆಳೆ ನೀಡಿ ಎಲ್ಲಾ ಜನರನ್ನು ಸುಖ-ಸಂತೋಷ-ನೆಮ್ಮದಿಯಿಂದ ಇಡುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಕರ್ಪೂರದ ಆರತಿಯೊಂದಿಗೆ ಜನರು ದೇವಿಗೆ ನಮನ ಸಲ್ಲಿಸಿ ಸುಮಂಗಲೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸುತ್ತಾರೆ.
ಹೀಗೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಬಂದು ದೇವಿಯ ದರ್ಶನ ಪಡೆದು, ಶಕ್ತಿ ದೇವತೆ ಕಾಂಚನೇಶ್ವರಿದೇವಿಗೆ ಗ್ರಾಮಸ್ಥರು ವಿಶೇಷವಾಗಿ 5 ವಾರಗಳ ದಿವಸ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಕೊನೆ ವಾರದಂದು ಭಕ್ತಿಯಿಂದ ಉಡಿ ತುಂಬುವುದು ವಿಶೇಷ.
*******

No comments:
Post a Comment